ಮಂಗಳೂರು: ಬೈಕ್ಗೆ ಲಾರಿ ಢಿಕ್ಕಿಯಾದ ಪರಿಣಾಮ ಕಾಲೇಜು ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ – 66ರ ಕುಂಟಿಕಾನದ ಫ್ಲೈ ಓವರ್ ಮೇಲೆ ಶುಕ್ರವಾರ (ಸೆ20) ಸಂಜೆ ಸಂಭವಿಸಿದೆ.
ಪಾಣೆಮಂಗಳೂರು ಮೆಲ್ಕಾರ್ ನಿವಾಸಿ, ಕೂಳೂರಿನ ಖಾಸಗಿ ಕಾಲೇಜೊಂದರ ಬಿಬಿಎ ದ್ವಿತೀಯ ವರ್ಷದ ವಿದ್ಯಾರ್ಥಿ ಜಾಸಿಮ್(20) ಮೃತ ದುರ್ದೈವಿ. ಮತ್ತೋರ್ವ ಯುವಕ ಗಾಯಗೊಂಡಿದ್ದಾರೆ. ಸಾಹಿರ್ ಸುಲೈಮಾನ್ (20), ಗಾಯಗೊಂಡ ಯುವಕ.
ಎರಡೂ ವಾಹನಗಳು ಒಂದೇ ದಿಕ್ಕಿನಲ್ಲಿ ಚಲಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು, ಕೇರಳದ ಕೊಟ್ಟಾಯಂ ಮೂಲದ ಅಜೇಶ್ ಬಿ ನಾಯರ್ ಚಲಾಯಿಸುತ್ತಿದ್ದ ಲಾರಿ ಮುಂಭಾಗದ ಬಲಭಾಗವು ಬೈಕ್ಗೆ ಡಿಕ್ಕಿ ಹೊಡೆದಿದೆ. ರಸ್ತೆಯ ಎಡಭಾಗಕ್ಕೆ ಬೈಕ್ ಬಿದ್ದಿದ್ದು, ಲಾರಿಯ ಹಿಂಬದಿಯ ಬಲ ಚಕ್ರ ಜಾಸಿಮ್ ಮೇಲೆ ಹರಿದಿದ್ದು, ಆತನ ಸಾವು ಸಂಭವಿಸಿದೆ.
ಗಾಯಗೊಂಡಿದ್ದ ಸುಲೈಮಾನ್ ನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಓವರ್ ಟೇಕ್ ಮಾಡುವ ಯತ್ನದಲ್ಲಿ ಈ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಕದ್ರಿ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.