ಕಾಸರಗೋಡು: ಸ್ನೇಹಿತನ ಬೆಡ್ ರೂಮ್ನಲ್ಲಿ ಸಿಕ್ರೇಟ್ ಆಗಿ ಕ್ಯಾಮರಾ ಇಟ್ಟು, ಖಾಸಗಿ ದೃಶ್ಯಗಳನ್ನು ಸೆರೆಹಿಡಿದ ಖತರ್ನಾಕ್ ಯುವಕ ಆತನನ್ನು ಬೆದರಿಸಿ ಬರೋಬ್ಬರಿ 58 ಲಕ್ಷ ರೂಪಾಯಿ ಎಗರಿಸಿದ ಘಟನೆ ವರದಿಯಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಈ ಕೃತ್ಯ ಎಸಗಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡಿನ ಚಟ್ಟಂಚ್ಯಾಲ್ ಬಂದಾಡ್ ನಿವಾಸಿ ಅಬ್ದುಲ್ ರಹ್ಮಾನ್ (43) ಬಂಧಿತ ಆರೋಪಿ. ಈತನನ್ನು ಕೊಚ್ಚಿ ಕಡವತ್ರ ಪೊಲೀಸರು ಬಂಧಿಸಿದ್ದಾರೆ.
ಈತನ ವಿರುದ್ಧ ಸ್ನೇಹಿತನಾಗಿರುವ ಕಾಸರಗೋಡು ನಿವಾಸಿ ಯುವಕ ಪೊಲೀಸರಿಗೆ ದೂರು ನೀಡಿದ್ದನು. ಅದರಂತೆ ಅಬ್ದುಲ್ ರಹ್ಮಾನ್ ಸೇರಿದಂತೆ ಒಟ್ಟು 6 ಮಂದಿ ವಿರುದ್ಧ ಕಡವತ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಯುವಕನ ಬೆಡ್ರೂಂ ದೃಶ್ಯಗಳನ್ನು ಗುಪ್ತ ಕ್ಯಾಮರಾ ಮೂಲಕ ಚಿತ್ರೀಕರಿಸಿ ಬಳಿಕ ಅದನ್ನು ತೋರಿಸಿ ಬ್ಲಾಕ್ಮೈಲ್ ಗೊಳಿಸಿ ಯುವಕನನ್ನು ಅಪಹರಿಸಿ 58 ಲಕ್ಷ ರೂಪಾಯಿ ಎಗರಿಸಿದ್ದಾನೆ.
ದೂರು ನೀಡಿದ ೩೦ರ ಹರೆಯದ ಯುವಕ ಕೊಚ್ಚಿಯಲ್ಲಿ ಹೋಟೆಲ್ ನಡೆಸುತ್ತಿದ್ದಾನೆ. 2020 ಮಾರ್ಚ್ ತಿಂಗಳಲ್ಲಿ ಆರೋಪಿ ತಾನು ವಾಸಿಸುವ ಮನೆಯ ಬೆಡ್ರೂಂನಲ್ಲಿ ತನಗೆ ತಿಳಿಯದೆ ಕ್ಯಾಮರಾ ಇರಿಸಿ, ತಾನು ಹಾಗೂ ತನ್ನ ಸ್ನೇಹಿತೆಯರ ಚಿತ್ರಗಳನ್ನು ಚಿತ್ರೀಕರಿಸಿದ್ದನು.
ನಂತರ ಆ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡುವುದಾಗಿ ಬೆದರಿಕೆಯೊಡ್ಡಿ ಆರೋಪಿ ಹಲವು ಬಾರಿ ನೇರವಾಗಿ 52 ಲಕ್ಷ ರೂಪಾಯಿ ಹಾಗೂ ಬ್ಯಾಂಕ್ ಮೂಲಕ 6 ಲಕ್ಷ ರೂಪಾಯಿಗಳನ್ನು ಎಗರಿಸಿದ್ದಾನೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ.
ಅನಂತರವೂ ಹಣ ನೀಡುವಂತೆ ಬೆದರಿಕೆಯೊಡ್ಡಿದ್ದಾನೆ. ಆದರೆ ಅದಕ್ಕೆ ತಾನು ಸಿದ್ದವಾಗದಿದ್ದಾಗ ಕಳೆದ ಮಂಗಳವಾರ ಆರೋಪಿ ಆತನ ಸ್ನೇಹಿತರೂ ಕಾಸರಗೋಡು ನಿವಾಸಿಗಳಾದ ಇರ್ಫಾನ್, ಅಮ್ಮಿ, ಆಶಿಫ್, ಮಟ್ಟಂಚೇರಿ ನಿವಾಸಿಗಳಾದ ಇತರ ಇಬ್ಬರು ಸೇರಿ ಕಲ್ಲೂರು-ಕತ್ತುಕಡವು ರಸ್ತೆ ಬಳಿ ತನ್ನ ಹೋಟೆಲ್ಗೆ ಬಂದು ತನ್ನನ್ನು ಬಲವಂತವಾಗಿ ಕಾರಿಗೆ ಹತ್ತಿಸಿ ಅಪಹರಿಸಿ ಇಡಕೊಚ್ಚಿಯ ಪ್ಲಾಟ್ನಲ್ಲಿ ಕೂಡಿಹಾಕಿ ಹಲ್ಲೆ ನಡೆಸಿದರೆಂದೂ ಪೊಲೀಸರಿಗೆ ನೀಡಿದ ದೂರಿನಲ್ಲಿ ಯುವಕ ಆರೋಪಿಸಿದ್ದಾನೆ.
ಆ ದೂರಿನಂತೆ ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರಕರಣದ ಕಿಂಗ್ ಪಿನ್ ಆರೋಪಿ ಅಬ್ದುಲ್ ರಹ್ಮಾನ್ನನ್ನು ಬಂಧಿಸಿದ್ದಾರೆ. ಕಡವತ್ರ ಪೊಲೀಸ್ ಠಾಣೆಯ ಎಸ್ಐ ಪಿ.ಎಂ. ರತೀಶ್ ನೇತೃತ್ವದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಇತರ ಐದು ಮಂದಿಯ ಪತ್ತೆಗಾಗಿ ಶೋಧ ಮುಂದುವರಿಸಿದ್ದಾರೆ.