Friday, June 27, 2025

ಮಳೆನೀರು ಕೊಯ್ಲು ಹೊಂಡಗಳ ನಿರ್ಮಾಣದ ವೇಳೆ ಪತ್ತೆಯಾಯ್ತು ನಿಧಿ..! ವಿದೇಶಿ ಚಿನ್ನದ ನಾಣ್ಯಗಳು ಭಾರತಕ್ಕೆ ಬಂದಿದ್ದು ಯಾಕೆ?

ಕೇರಳದ ಕಣ್ಣೂರು ಜಿಲ್ಲೆಯ ರಬ್ಬರ್ ತೋಟದಲ್ಲಿ ಮಳೆನೀರು ಕೊಯ್ಲು ಹೊಂಡಗಳ ನಿರ್ಮಾಣಕ್ಕೆ ನೆಲ ಅಗೆಯುವಾಗ ಮಹಾತ್ಮ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕಾರ್ಮಿಕರಿಗೆ ನಿಧಿ ಸಿಕ್ಕಿದ್ದು ಭಾರೀ ಸಂಚಲನ ಸೃಷ್ಟಿಸಿದ್ದು ಇದೀಗ ಚಿನ್ನದ ನಿಧಿ ಪುರಾತತ್ವ ಇಲಾಖೆಯ ಕೈ ಸೇರಿದ್ದು ಮಹತ್ತರ ಅಂಶಗಳು ಹೊರಬಿದ್ದಿದೆ.

ಜುಲೈ 12ರ ಶುಕ್ರವಾರದಂದು ಚಮಗಿ ಪಂಚಾಯಿತಿ ವ್ಯಾಪ್ತಿಯ ಪರಿಪ್ಪಾಯಿ ಸರಕಾರಿ ಎಲ್‌ಪಿ ಶಾಲೆ ಬಳಿಯ ಖಾಸಗಿ ಆಸ್ತಿಯಲ್ಲಿ ನರೇಗಾ ಕಾರ್ಮಿಕರು ಗುಂಡಿ ತೆಗೆಯುವಾಗ ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳು ಮತ್ತು ಆಭರಣಗಳನ್ನು ಹೊಂದಿರುವ ಮಣ್ಣಿನ ಮಡಕೆಯನ್ನು ಪತ್ತೆಯಾಗಿದೆ.

ಮಡಕೆಯನ್ನು ಬಾಂಬ್ ಎಂದು ತಪ್ಪಾಗಿ ಭಾವಿಸಿದ ಕಾರ್ಮಿಕರು ಆರಂಭದಲ್ಲಿ ಸ್ಫೋಟದ ಭಯದಿಂದ ಅದನ್ನು ಎಸೆದಿದ್ದಾರೆ. ಅದು ಒಡೆದಾಗ ಅದರಲ್ಲಿ ಅಮೂಲ್ಯವಾದ ಸಂಪತ್ತು ಕಂಡು ಬಂದಿದೆ. 17 ಮುತ್ತಿನ ಮಣಿಗಳು, 13 ಚಿನ್ನದ ಪದಕಗಳು, ಸಾಂಪ್ರದಾಯಿಕ ಆಭರಣವಾದ ‘ಕಶುಮಾಲಾ’ ಭಾಗವೆಂದು ನಂಬಲಾದ ನಾಲ್ಕು ಪದಕಗಳು, ಒಂದು ಜೋಡಿ ಕಿವಿಯೋಲೆಗಳು ಮತ್ತು ಬೆಳ್ಳಿಯ ನಾಣ್ಯಗಳು ಅದರಲ್ಲಿರುವುದು ಕಂಡು ಬಂದಿದೆ.

ಚಿನ್ನ, ಬೆಳ್ಳಿ ವಸ್ತುಗಳನ್ನು ನೋಡಿ ಆಶ್ಚರ್ಯಪಟ್ಟು ಏನು ಮಾಡಬೇಕೆಂದು ಗೊಂದಲಕ್ಕೀಡಾಗಿದ್ದೇವೆ, ನಂತರ ನಾವು ಪಂಚಾಯಿತಿ ಅಧ್ಯಕ್ಷರಿಗೆ ಮಾಹಿತಿ ನೀಡಿದ್ದೇವೆ ಎಂದು ಕಾರ್ಮಿಕರಲ್ಲಿ ಒಬ್ಬರಾದ ಆಶಿತಾ ಹೇಳಿದ್ದಾರೆ. ಪಂಚಾಯಿತಿ ಅಧಿಕಾರಿಗಳು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತಳಿಪರಂಬ ಪೊಲೀಸರು ಆಗಮಿಸಿ ವಸ್ತುಗಳನ್ನು ವಶಕ್ಕೆ ಪಡೆದು ತಳಿಪರಂಬ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಪುರಾತತ್ವ ಇಲಾಖೆಯ ನಿಲುವೇನು?
200 ವರ್ಷಗಳಷ್ಟು ಹಳೆಯ, ಇಂಡೋ-ಫ್ರೆಂಚ್ ನಾಣ್ಯಗಳು ಇವು ಎಂದು ಪುರಾತತ್ವ ಇಲಾಖೆ ತಿಳಿಸಿದೆ. ಅಧಿಕಾರಿಗಳ ಪ್ರಕಾರ, ವೆನಿಸ್‌ನ ಮೂವರು ಆಡಳಿತಗಾರರ ಕಾಲದಲ್ಲಿ ತಯಾರಿಸಲಾದ ವೆನೆಷಿಯನ್ ಡಕ್ಯಾಟ್ಸ್ ಎಂಬ ಚಿನ್ನದ ನಾಣ್ಯಗಳಿಂದ ಮಾಡಿದ 13 ನೆಕ್ಲೇಸ್‌ಗಳು ಪತ್ತೆಯಾಗಿವೆ ಎಂದಿದ್ದಾರೆ.

ನಿಧಿಯು ಸುಮಾರು 1659 ರಿಂದ 1826 ರ ಅವಧಿಗೆ ಸಂಬಂಧಿಸಿದೆ ಎಂಬುದು ಪರೀಕ್ಷೆಯಿಂದ ಸ್ಪಷ್ಟವಾಗಿದೆ. ಸಂಗ್ರಹದಲ್ಲಿರುವ ಇತ್ತೀಚಿನ ವಸ್ತುಗಳು 1826 ರ ಕಣ್ಣೂರಿನ ನಾಣ್ಯಗಳಾಗಿವೆ. ಈ ಅವಧಿಯಲ್ಲಿ ನಿಧಿಯನ್ನು ಹೂತಿಟ್ಟಿರಬೇಕು ಎಂದು ಪುರಾತತ್ವ ಇಲಾಖೆ ಅಭಿಪ್ರಾಯಪಟ್ಟಿದೆ.

ಇನ್ನು ಈ ಚಿನ್ನಾಭರಣ, ನಾಣ್ಯಗಳು ಯಾಕೆ ಭಾರತಕ್ಕೆ ಬಂದಿದೆ. ಇದರ ಹಿನ್ನಲೆ ಏನು ಎಂಬುವುದು ಇನ್ನಷ್ಟೆ ತಿಳಿದು ಬರಬೇಕಾಗಿದೆ.

Related Articles

Latest Articles