ಇಂದು ಎಸ್ಎಸ್ಎಲ್ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಹಾಸನ ಜಿಲ್ಲೆಯ ಸಕಲೇಶಪು ತಾಲ್ಲೂಕಿನ ಚಿನ್ನಳ್ಳಿ ಗ್ರಾಮದಲ್ಲಿ ಅಪರೂಪದ ಫಲಿತಾಂಶವೊಂದು ಬಂದಿದೆ. ಹೌದು, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಮಗನ ಜೊತೆ ತಾಯಿಯೂ ಪಾಸ್ ಆದ ಅಚ್ಚರಿ ಘಟನೆ ನಡೆದಿದೆ. ಎರಡನೇ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದ 38 ವರ್ಷದ ಜ್ಯೋತಿ.ಪಿ.ಆರ್. ಸಕಲೇಶಪುರ ತಾಲ್ಲೂಕಿನ, ಬಾಳ್ಳುಪೇಟೆಯ ಸಿದ್ದಣ್ಯಯ್ಯ ಹೈಸ್ಕೂಲ್ನಲ್ಲಿ ಮಗನಾದ ನಿತಿನ್.ಸಿ.ಬಿ. ಜೊತೆ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದರು.
ಇನ್ನು ಜ್ಯೋತಿ.ಪಿ.ಆರ್ ಪತಿ ಭುವನೇಶ್ ಚಿನ್ನಳ್ಳಿ ಗ್ರಾಮದಲ್ಲಿ ಬೇಕರಿ ಇಟ್ಟುಕೊಂಡಿದ್ದಾರೆ. ಮಗನಾದ ನಿತಿನ್.ಸಿ.ಬಿ ಅನ್ನು ಬಾಳ್ಳುಪೇಟೆಯಲ್ಲಿರುವ ವಿವೇಕ ಕಾನ್ವೆಂಟ್ನಲ್ಲಿ ಓದುತ್ತಿದ್ದ. ಇಂದು ಫಲಿತಾಂಶ ಪ್ರಕಟವಾಗಿದ್ದು 250 ಅಂಕ ಪಡೆದು ಜ್ಯೋತಿ.ಪಿ.ಆರ್ ತೇರ್ಗಡೆ ಆದರೆ, ಇತ್ತ ಪುತ್ರ ನಿತಿನ್.ಸಿ.ಬಿ 582 ಅಂಕ ಪಡೆದಿದ್ದಾನೆ. ಮಗನ ಜೊತೆ ತಾಯಿಯೂ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪಾಸಾಗಿದ್ದಕ್ಕೆ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.
ಭಾಗ್ಯಲಕ್ಷ್ಮೀ ಸೀರಿಯಲ್ ಕಥೆಗೆ ಹೋಲಿಕೆ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಕೀರ್ತಿ ಅಭಿನಯದ ಭಾಗ್ಯಲಕ್ಷ್ಮೀ ಕಥೆಯೂ ಹೀಗೆಯೇ ಇದೆ. ಭಾಗ್ಯಳು ಮಗಳ ಜೊತೆ ೧೦ ನೇ ತರಗತಿ ಪರೀಕ್ಷೆ ಬರೆದರೆ ಇಲ್ಲಿ ನಿಜಜೀವನದಲ್ಲಿ ಜ್ಯೋತಿ ಪರೀಕ್ಷೆ ಬರೆದು ತೇರ್ಗಡೆಯಾಗಿದ್ದಾರೆ.