Friday, June 27, 2025

ಪುತ್ತೂರು: ಮೇಲ್ಛಾವಣಿ ಕುಸಿದು ಬಿದ್ದು ಕಾರ್ಮಿಕ ಮೃತ್ಯು

ದಕ್ಷಿಣ ಕನ್ನಡ: ಮನೆಯ ಸಿಟೌಟ್‌ನ ಸೆಂಟ್ರಿಂಗ್‌ ಕೆಲಸ ಮಾಡುತ್ತಿದ್ದಾಗ ಮೇಲ್ಛಾವಣಿ ಕುಸಿದು ಬಿದ್ದು ಗಾಯಗೊಂಡು ಕಾರ್ಮಿಕರೊಬ್ಬರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ಜಿಲ್ಲೆಯ ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮ ಪಾದಲಾಡಿ ಎಂಬಲ್ಲಿ ಅ 25ರಂದು ಸಂಭವಿಸಿದೆ.

ಅರಿಯಡ್ಕ ಗ್ರಾಮದ ನಿವಾಸಿ ಶೇಖರ್‌ ಕುಲಾಲ್‌ (45) ಮೃತಪಟ್ಟವರು. ಘಟನೆಯಲ್ಲಿ ಸಂಜೀವ ಮೊಗೇರ ಗಾಯಗೊಂಡಿದ್ದಾರೆ. ಅರಿಯಡ್ಕ ಗ್ರಾಮದ, ಪಾದಲಾಡಿ ಎಂಬಲ್ಲಿ ಮನೆಯೊಂದರಲ್ಲಿ ಸೆಂಟ್ರಿಂಗ್‌ ಕೆಲಸ ನಡೆಯುತ್ತಿತ್ತು. ಇದರ ಕಾಮಗಾರಿಗೆ ಅ. 25ರಂದು ಸಂಜೀವ ಮೊಗೇರ ಹಾಗೂ ಶೇಖರ್‌ ಕುಲಾಲ್‌ ಬಂದಿದ್ದರು. ಮೇಲ್ಛಾವಣಿ ಕುಸಿದು ಬಿದ್ದು ಶೇಖರ್‌ಕುಲಾಲ್‌ ಗಂಭೀರವಾಗಿ ಗಾಯಗೊಂಡಿದ್ದಾರೆ.‌

ತತ್‌ಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ದಾರಿ ಮಧ್ಯೆ ಅವರು ಮೃತಪಟ್ಟಿದ್ದಾರೆ. ಈ ಕುರಿತು ಮೃತರ ಸಹೋದರ ದೂರು ನೀಡಿದ್ದು, ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Latest Articles